ಅಧ್ಯಾಯ 5

ಮತ್ತಾಯನು ಬರೆದ ಸುಸಂದೇಶಗಳು


ಯೇಸುವಿನ ಪರ್ವತ ಪ್ರಸಂಗ
(ಲೂಕ 6:20-49, 11:1-4, 9-13, 33-36, 12:22-24, 57-59, 16:17, 18)

1 ಯೇಸುವು ತಮ್ಮನ್ನು ಹಿಂಬಾಲಿಸಿ ಬಂದ ಜನಸಮೂಹವನ್ನು ನೋಡಿ ಒಂದು ಪರ್ವತವನ್ನೇರಿ ಕುಳಿತುಕೊಂಡರು. ಯೇಸುವಿನ  ಶಿಷ್ಯರು ಮತ್ತು ಜನಸಮೂಹ ಅವರ ಮುಂದೆ ನೆರೆಯಿತು. 2 ಯೇಸು ಅವರಿಗೆ ಬೋಧನೆ ಮಾಡುತ್ತಾ ಹೇಳಿದರು;

3 "ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು. 
4 ದುಃಖಪಡುವವರು ಧನ್ಯರು; ಸಮಾಧಾನವನ್ನು ಅವರು ಹೊಂದುವರು. 
5 ಶಾಂತಸ್ವಭಾವವುಳ್ಳವರು ಧನ್ಯರು; ಭೂಮಿಗೆ ಅವರು ಬಾಧ್ಯರಾಗುವರು. 
6 ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಅವರು ತೃಪ್ತಿಯನ್ನು ಹೊಂದುವರು. 
7 ಕರುಣೆಯುಳ್ಳವರು ಧನ್ಯರು; ಅವರು ಕರುಣೆಯನ್ನು ಹೊಂದುವರು. 
8 ಶುದ್ಧ ಹೃದಯವುಳ್ಳವರು ಧನ್ಯರು; ಅವರು ದೇವರನ್ನು ನೋಡುವರು. 
9 ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು. 
10 ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕರಾಜ್ಯವು ಅವರದು.

11 ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ, ಹಿಂಸಿಸಿ ನಿಮಗೆ ವಿರೋಧವಾಗಿ ಕೆಟ್ಟ ಮಾತುಗಳನ್ನು ಸುಳ್ಳು ಸುಳ್ಳೇ ಹೊರಿಸಿದರೆ ನೀವು ಧನ್ಯರು. 12 ಸಂತೋಷಿಸಿರಿ, ಉಲ್ಲಾಸದಿಂದಿರಿ; ಸ್ವರ್ಗಲೋಕದಲ್ಲಿ ನಿಮಗೆ ದೊರೆಯುವ ಪ್ರತಿಫಲವು ದೊಡ್ಡದಾಗಿರುತ್ತದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆಗೆ ಒಳಪಡಿಸಿದ್ದರು. 

13 ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಬೇರೆ ಯಾವ ವಸ್ತುವಿನಿಂದ ಆ ರುಚಿ ಬಂದೀತು? ರುಚಿಯನ್ನು ಕಳೆದುಕೊಂಡ ಅದು ನಿಷ್ಪ್ರಯೋಜಕವಾಗಿ ಹೊರಗೆ ಚೆಲ್ಲಲ್ಪಡುತ್ತದೆ. ಜನರು ಅದನ್ನು ತುಳಿದು ಹಾಕಿ ಬಿಡುವರು. 14 ನೀವು ಲೋಕದ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು. 15 ಅಂತೆಯೇ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕನ್ನು ಕೊಡುವದು. 16 ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. 

17 ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ವಚನಗಳನ್ನಾಗಲಿ ತೆಗೆದು ಹಾಕಲು ನಾನು ಬಂದೆನೆಂದುಕೊಳ್ಳಬೇಡಿರಿ, ತೆಗೆದುಹಾಕುವುದಕ್ಕಾಗಿ ಬಂದವನಲ್ಲ; ಅದನ್ನು ನೆರವೇರಿಸುವುದಕ್ಕಾಗಿ ಬಂದಿದ್ದೇನೆ. 18 ಆಕಾಶವೂ, ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ಧರ್ಮಶಾಸ್ತ್ರದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 

19 ಆದುದರಿಂದ ಈ ಆಜ್ಞೆಗಳಲ್ಲಿ ಚಿಕ್ಕದಾದ ಒಂದನ್ನು ಮೀರಿ ಹಾಗೆಯೇ ಜನರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅಲ್ಪನೆಂದು ಕರೆಯಲ್ಪಡುವನು; ಆದರೆ ತಾನೇ ಇವುಗಳನ್ನು ಕೈಕೊಂಡು ಬೋಧಿಸುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. 20 ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸಲು ಆಗುವುದಿಲ್ಲ ಎಂದು ನಿಜವಾಗಿ ಹೇಳುತ್ತೇನೆ.

21 ನರಹತ್ಯ ಮಾಡಬಾರದು; ನರಹತ್ಯಮಾಡಿದರೆ ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವಿರಿ, ಎಂದು ಪೂರ್ವಿಕರು ಹೇಳಿರುವುದನ್ನು ನೀವು ಕೇಳಿದ್ದೀರಿ. 22 ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾರಾದರೂ ಸಿಟ್ಟಾದರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾರು ತನ್ನ ಸಹೋದರನನ್ನು, 'ಥೂ! ನೀಚಾ' ಎಂದು ಹೇಳಿದರೆ ಅವನು ನ್ಯಾಯಸಭೆಯ ತೀರ್ಪಿಗೆ ಒಳಗಾಗುವನು. 23 ಆದುದರಿಂದ ನೀನು ನಿನ್ನ ಕಾಣಿಕೆಯನ್ನು ಸಲ್ಲಿಸಲು ಬಲಿಪೀಠದ ಬಳಿಗೆ ಹೋದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಬಗ್ಗೆ ವಿರೋಧವಿದೆ ಎಂದು ನಿನ್ನರಿವಿಗೆ ಬಂದರೆ 24 ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆಯೇ ಬಿಟ್ಟು ಮೊದಲು ನಿನ್ನ ಸಹೋದರನ ಜೊತೆಗೆ ಸೇರು; ಅನಂತರ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು. 

25 ನಿನ್ನ ವಿರೋಧಿಯ ಸಂಗಡ ನೀನು ದಾರಿಯಲ್ಲಿ ನಡೆದು ಬರುವಾಗ ತ್ವರೆಯಾಗಿ ಅವನ ಜೊತೆ ಒಂದಾಗು; ಇಲ್ಲವಾದರೆ ಯಾವ ಸಮಯದಲ್ಲಾದರೂ ಆ ವಿರೋಧಿಯು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಕರೆಸುವನು ಮತ್ತು ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸುವನು; ಆಗ ನೀನು ಸೆರೆಮನೆಯಯನ್ನು ಸೇರಬೇಕಾದೀತು.  26 ನಾನು ನಿನಗೆ ನಿಜವಾಗಿ ಹೇಳುವುದೇನೆಂದರೆ, ಕೊನೆಯ ಕಾಸನ್ನು ಸಲ್ಲಿಸುವ ತನಕ ಯಾವ ವಿಧದಿಂದಲೂ ಸೆರೆಮನೆಯಿಂದ ಹೊರಬರಲು ನಿನ್ನಿಂದ ಸಾಧ್ಯವಾಗುವುದೇ ಇಲ್ಲ. 

27 ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವುದನ್ನು ನೀವು ಕೇಳಿದ್ದೀರಿ; 28 ಆದರೆ ನಾನು ನಿಮಗೆ ಹೇಳುವುದೇನೆಂದರೆ, 'ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಸಂಗಡ ವ್ಯಭಿಚಾರ ಮಾಡಿದವನಾಗುತ್ತಾನೆ. 29 ಆದುದರಿಂದ ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೆ ಸಿಲುಕಿಸುವುದಾದರೆ ಅದನ್ನು ಕಿತ್ತು ಹಾಕು; ಏಕೆಂದರೆ ಇಡೀ ಶರೀರವನ್ನು ನರಕಕ್ಕೆ ತಳ್ಳುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವುದೇ ಹಿತ. 30 ನಿನ್ನ ಬಲಗೈ ನಿನ್ನನ್ನು ಪಾಪ ಮಾಡಲು ಪ್ರೇರೇಪಣೆ ಮಾಡಿದರೆ ಅದನ್ನು ಕಡಿದುಹಾಕು; ಏಕೆಂದರೆ ಇಡೀ ಶರೀರವನ್ನು ನರಕಕ್ಕೆ ತಳ್ಳುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವುದು ಸರಿಯವಲ್ಲವೇ.

31 ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಬಿಡಬೇಕೆಂದಿದ್ದರೆ ಅವನು ಆಕೆಗೆ ತ್ಯಾಗಪತ್ರ ನೀಡಲಿ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆಯಲ್ಲವೇ; 32 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅನೈತಿಕ ಕಾರಣಕ್ಕಲ್ಲದೇ ಬೇರೆ ಕಾರಣಕ್ಕೆ ತನ್ನ ಹೆಂಡತಿಯನ್ನು ಬಿಟ್ಟು ಬಿಡಲು ನಿರ್ಧರಿಸುವವನು, ಆಕೆಯು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ; ಮತ್ತು ಬಿಡಲ್ಪಟ್ಟವಳನ್ನು ಯಾರು ಮದುವೆಯಾಗುತ್ತಾನೋ ಅವನು ಸಹ ವ್ಯಭಿಚಾರ ಮಾಡಿದಂತಾಗುತ್ತದೆ. 

33 ನೀನು ಸುಳ್ಳಾಣೆ ಇಡಬಾರದು. ಆದರೆ ನಿನ್ನ ಪ್ರಮಾಣಗಳನ್ನು ಸರ್ವೇಶ್ವರನಿಗೆ ಸಲ್ಲಿಸಬೇಕು ಎಂದು ಪೂರ್ವಿಕರು ಹೇಳಿರುವುದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಯಾವ ಕಾರಣಕ್ಕೂ ಅಣೆಯನ್ನು ಇಡಬೇಡಿ. ಆಕಾಶದ ಮೇಲೆ ಆಣೆಯಿಡಬೇಡ; ಏಕೆಂದರೆ ಅದು ದೇವರ ಸಿಂಹಾಸನ. 35 ಭೂಮಿಯ ಮೇಲೆಯೂ ಬೇಡ; ಅದು ಅವರ ಪಾದಪೀಠ. ಜೆರುಸಲೇಮಿನ ಮೇಲೆಯೂ ಬೇಡ; ಅದು ಆ ಮಹಾಅರಸನ ಪಟ್ಟಣ. 36 ನಿನ್ನ ತಲೆಯ ಮೇಲೆ ಆಣೆ ಇಡಬೇಡ; ಏಕೆಂದರೆ ನೀನು ನಿನ್ನ ಒಂದು ಕೂದಲನ್ನಾದರೂ ಬಿಳಿ ಅಥವಾ ಕಪ್ಪು ಮಾಡಲಾರೆ. 37 ಆದರೆ ನಿನ್ನ ಮಾತು ನಿಜವೇ ಆಗಿದ್ದರೆ ಹೌದೆಂದೂ, ಅಲ್ಲವಾದರೆ ಅಲ್ಲವೆಂದೂ ಹೇಳು; ಇವುಗಳಿಗಿಂತ ಹೆಚ್ಚಿನದ್ದು ಸೈತಾನನಿಂದ ಬರುವಂತಹದ್ದು. 

38 'ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆ', ಎಂದು ಹೇಳಿರುವುದನ್ನು ನೀವು ಕೇಳಿರುವಿರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನೀವು ಕೆಟ್ಟದ್ದನ್ನು ಮಾಡಬೇಡಿರಿ; ಯಾರಾದರೂ ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ, ಅವರಿಗೆ ಮತ್ತೊಂದು ಕೆನ್ನೆಯನ್ನು ತೋರಿಸಿ. 40 ನಿನ್ನೊಂದಿಗೆ ಜಗಳವಾಡಿ ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ನಿನ್ನ ಒಳ ಅಂಗಿಯನ್ನೂ ಕೊಟ್ಟುಬಿಡು. 41 ಅಲ್ಲದೇ ಯಾರಾದರೂ ನಿನ್ನನ್ನು ಒಂದು ಮೈಲು ಜೊತೆಯಲ್ಲಿ ಬರುವಂತೆ ಬಲವಂತ ಮಾಡಿದರೆ ಅವರೊಂದಿಗೆ ಎರಡು ಮೈಲು ಹೋಗು. 42 ನಿನ್ನಲ್ಲಿ ಏನನ್ನಾದರೂ ಕೇಳುವವನಿಗೆ ಅದನ್ನು ಕೊಡು; ಮತ್ತು ನಿನ್ನಿಂದ ಸಾಲ ತೆಗೆದುಕೊಳ್ಳಬೇಕೆಂದಿರುವವನಿಗೆ ನಿನ್ನ ಮುಖ ತಿರುಗಿಸದಿರು. 

43 'ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು', ಎಂದು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನೂ ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. ನಿಮ್ಮನ್ನು ನಿಂದಿಸುವವರಿಗಾಗಿಯೂ, ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ. 

45 ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ಪ್ರೀತಿಯ ಮಕ್ಕಳಾಗುವಿರಿ; ಅವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಯಾವ ಪ್ರತಿಫಲ ದೊರಕೀತು? ಅನ್ಯರೂ ಸಹ ಹಾಗೆಯೇ ಮಾಡುತ್ತಾರಲ್ಲವೇ? 47 ಇದಲ್ಲದೆ ನೀವು ನಿಮ್ಮ ಸಹೋದರನನ್ನು ಮಾತ್ರ ಗೌರವಿಸಿದರೆ ಸಾಲದು. ಉಳಿದವರೂ ಸಹ ಹಾಗೆಯೇ ಮಾಡುತ್ತಾರಲ್ಲವೇ? 48 ಹಾಗಾಗಿ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಶುದ್ಧರಾಗಿರುವಂತೆ ನೀವೂ ಸಹ ಪರಿಶುದ್ಧರಾಗಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ