ಅಧ್ಯಾಯ 27

ಮತ್ತಾಯನು ಬರೆದ ಸುಸಂದೇಶಗಳು


ಯೂದನ ಆತ್ಮಹತ್ಯೆ

1 ಬೆಳಕು ಹರಿಯಲು ಎಲ್ಲಾ ಪ್ರಧಾನ ಯಾಜಕರೂ, ಪ್ರಜಾಮುಖಂಡರೂ ಯೇಸುವನ್ನು ಕೊಲ್ಲಿಸುವ ನಿರ್ಧಾರಕ್ಕೆ ಬಂದರು. 2 ಅವರು ಯೇಸುವನ್ನು ಕಟ್ಟಿ ಅಧಿಪತಿಯಾದ ಪೊಂತ್ಯಸ್‌ ಪಿಲಾತನಿಗೆ ಒಪ್ಪಿಸಿದರು. 3 ಆಗ ಯೇಸುವನ್ನು ಹಿಡಿದುಕೊಟ್ಟ ಜೂದನು ಯೇಸುವನ್ನು ದಂಡನೆಗೆ ಒಪ್ಪಿಸಿದ್ದನ್ನು ಕಂಡು ಪಶ್ಚಾತ್ತಾಪಪಟ್ಟನು. ತಾನು ಯೇಸುವನ್ನು ಹಿಡಿದುಕೊಡಲು ಪಡೆದುಕೊಂಡ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಪ್ರಧಾನಯಾಜಕರ ಮತ್ತು ಪ್ರಜಾಪ್ರತಿನಿಧಿಗಳ ಬಳಿಗೆ ತಂದು, 4 "ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ತಪ್ಪು ಮಾಡಿದ್ದೇನೆ," ಎಂದನು. ಅದಕ್ಕೆ ಅವರು, "ಅದಕ್ಕೇನಾಗ ಬೇಕು? ಅದನ್ನು ನೀನೇ ನೋಡಿಕೋ," ಎಂದರು. 5 ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿಯೇ ಎಸೆದು, ಅಲ್ಲಿಂದ ಹೊರಟುಹೋಗಿ ನೇಣು ಹಾಕಿಕೊಂಡನು. 6 ಆಗ ಪ್ರಧಾನ ಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು, "ಅದು ರಕ್ತದ ಕ್ರಯವಾಗಿದೆ; ಅವುಗಳನ್ನು ಬೊಕ್ಕಸಕ್ಕೆ ಹಾಕುವುದು ಸರಿಯಲ್ಲ," ಎಂದರು. 7 ಅವರು ಆಲೋಚನೆಯನ್ನು ಮಾಡಿ ಆ ಹಣದಿಂದ ದಿಕ್ಕಿಲ್ಲದೆ ಸತ್ತವರನ್ನು ಸಮಾಧಿ ಮಾಡುವುದಕ್ಕಾಗಿ ಕುಂಬಾರನೊಬ್ಬನಿಂದ ಹೊಲವನ್ನು ಕೊಂಡುಕೊಂಡರು. 8 ಈ ಕಾರಣದಿಂದಾಗಿಯೇ ಇಂದಿನವರೆಗೂ ಆ ಹೊಲವನ್ನು 'ರಕ್ತದ ಹೊಲ'ವೆಂದು ಕರೆಯಲಾಗುತ್ತಿದೆ. 9 ಆಗಲೇ ಪ್ರವಾದಿಯಾದ ಯೆರೆಮೀಯನು ಹೇಳಿದ ಮಾತೊಂದು ನೆರವೇರಿತು; ಅದೇನೆಂದರೆ, 

'ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು 
10 ಸರ್ವೇಶ್ವರ ಸ್ವಾಮಿಯು ನನಗಿತ್ತ ಆಣತಿಯಂತೆ 
ಅವುಗಳನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು
ಅವರು ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯಿದು, 
ಇಸ್ರೇಲಿನ ಜನರು ಒಪ್ಪಿದ ಬೆಲೆಯಿದು'
ಎಂಬುದು ಆ ಪ್ರವಾದನೆ.

ಪಿಲಾತನು ಯೇಸುವನ್ನು ಮರಣದಂಡನೆಗೆ ಒಪ್ಪಿಸಿದ್ದು
(ಮಾರ್ಕ15:2-15; ಲೂಕ23:2,3,13-25; ಯೊವಾನ್ನ18:29-40, 19:16)

11 ಯೇಸುವನ್ನು ಬಂಧಿಸಿ ರಾಜ್ಯಪಾಲನ ಮುಂದೆ ತಂದು ನಿಲ್ಲಿಸಲಾಯಿತು. ಆಗ ಆ ರಾಜ್ಯಪಾಲನು ಯೇಸುವಿಗೆ, "ನೀನು ಯೆಹೂದ್ಯರ ಅರಸನೋ?" ಎಂದು ಕೇಳಿದನು. ಅದಕ್ಕೆ ಯೇಸುವು, "ನೀನೇ ಅದನ್ನು ಹೇಳುತ್ತಿರುವೆಯಲ್ಲ," ಎಂದವನಿಗೆ ಹೇಳಿದರು. 12 ಆಗ ಪ್ರಧಾನ ಯಾಜಕರೂ, ಪ್ರಜಾ ನಾಯಕರು ಯೇಸುವಿನ ಮೇಲೆ ದೂರು ನೀಡುತ್ತಿರಲು ಅವರು ಯಾವ ಉತ್ತರವನ್ನೂ ಕೊಡಲಿಲ್ಲ. 13 ಆಗ ಪಿಲಾತನು ಯೇಸುವಿಗೆ, "ಇವರು ನಿನ್ನ ವಿರುದ್ಧವಾಗಿ ಇಷ್ಟು ದೂರುಗಳನ್ನು ಹೇಳುತ್ತಿದ್ದರೂ ಸುಮ್ಮನಿರುವೆಯಲ್ಲಾ, ನಿನಗದು ಕೇಳಿಸುತ್ತಿಲ್ಲವೇ?" ಎಂದನು. 14 ಯೇಸುವು ಯಾವ ಮಾತಿಗೂ ಉತ್ತರಿಸದಿರುವುದನ್ನು ಕಂಡು ರಾಜ್ಯಪಾಲನು ಅತ್ಯಾಶ್ಚರ್ಯಪಟ್ಟನು. 15 ಪಾಸ್ಕ ಹಬ್ಬದ ಸಮಯದಲ್ಲಿ ಜನರ ಅಪೇಕ್ಷೆಯ ಮೇರೆಗೆ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಬಿಡುವ ಪದ್ಧತಿಯಿತ್ತು. 16 ಆ ಸಮಯದಲ್ಲಿ 'ಬರಬ್ಬ'ನೆಂಬ ಹೆಸರಿನ ಒಬ್ಬ ಖೈದಿಯು ಸೆರೆಮನೆಯಲ್ಲಿ ಇದ್ದನು. 17 ಅಂತಹ ಸಮಯವು ಕೂಡಿಬಂದಿದ್ದರಿಂದ ಪಿಲಾತನು ಅಲ್ಲಿ ನೆರೆದಿದ್ದ ಜನರಿಗೆ, "ಸೆರೆಯಲ್ಲಿರುವ ಬರಬ್ಬ ಮತ್ತು ಕ್ರಿಸ್ತನೆನಿಸಿಕೊಳ್ಳುವ ಯೇಸು ಈ ಈರ್ವರಲ್ಲಿ ಯಾರನ್ನು ಬಿಟ್ಟು ಬಿಡಬೇಕೆನ್ನುತ್ತೀರಿ?" ಎಂದು ಕೇಳಿದನು. 18 ಅದಕ್ಕೆ ಕಾರಣ ಯೇಸುವನ್ನು ಆ ಜನರು ಹೊಟ್ಟೇಕಿಚ್ಚಿನಿಂದಾಗಿ ಹಿಡಿದುಕೊಟ್ಟಿದ್ದಾರೆಂಬುದು ಅವನಿಗೆ ಗೊತ್ತಾಗಿತ್ತು. 19 ಅದೂ ಅಲ್ಲದೆ ಅವನು ನ್ಯಾಯಾಧೀಶನ ಆಸನದಲ್ಲಿ ಕುಳಿತಿದ್ದಾಗ ಅವನ ಹೆಂಡತಿಯು, "ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ; ಏಕೆಂದರೆ ನಾನು ಆತನ ದೆಸೆಯಿಂದಾಗಿ ಈ ದಿನ ಕನಸಿನಲ್ಲಿ ಬಹಳ ಕಷ್ಟಪಟ್ಟಿದ್ದೇನೆ," ಎಂದು ಹೇಳಿ ಕಳುಹಿಸಿದ್ದಳು. 20 ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು 'ಬರಬ್ಬ'ನನ್ನು ಬಿಟ್ಟು ಕೊಟ್ಟು ಯೇಸುವನ್ನು ಕೊಲ್ಲುವಂತೆ ಕೇಳಿಕೊಳ್ಳುವಂತೆ ಜನಸಮೂಹವನ್ನು ಪ್ರೇರೇಪಿಸಿದರು. 21 ರಾಜ್ಯಪಾಲನು ಅಲ್ಲಿ ನೆರೆದಿದ್ದವರಿಗೆ ಮತ್ತೊಮ್ಮೆ, "ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಬಿಡಬೇಕೆನ್ನುತ್ತೀರಿ," ಎನ್ನಲು ಅವರು, "ಬರಬ್ಬನನ್ನು," ಎಂದರು. 22 ಪಿಲಾತನು ಅವರಿಗೆ, "ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?" ಎಂದು ಕೇಳಲು ಅವರೆಲ್ಲರೂ, "ಅವನನ್ನು ಶಿಲುಬೆಗೆ ಹಾಕಿಸು," ಎಂದು ಹೇಳಿದರು. 23 ಆಗ ರಾಜ್ಯಪಾಲನು, "ಯಾಕೆ? ಈತನೇನು ಕೆಟ್ಟದ್ದನ್ನು ಮಾಡಿದ್ದಾನೆ?" ಎಂದು ಕೇಳಿದನು. ಆದರೆ ಅವರು, "ಆತನನ್ನು ಶಿಲುಬೆಗೆ ಹಾಕಿಸು," ಎಂದು ಇನ್ನೂ ಹೆಚ್ಚಾಗಿ ಕೂಗತೊಡಗಿದರು. 24 ಪಿಲಾತನು ತನ್ನ ಯತ್ನ ಫಲಿಸಲಿಲ್ಲ, ಗದ್ದಲವೇ ಹೆಚ್ಚಾಗುತ್ತಿದೆ ಎಂಬುದನ್ನು ಮನಗಂಡು ನೀರನ್ನು ತೆಗೆದುಕೊಂಡು ಜನಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದುಕೊಂಡು, "ಈ ನೀತಿವಂತನ ರಕ್ತಕ್ಕೆ ನಾನು ಹೊಣೆಯಲ್ಲ, ಇದು ನಿಮ್ಮ ಮೇಲಿರಲಿ," ಎಂದನು. 25 ಅದಕ್ಕೆ ಜನರೆಲ್ಲರೂ ಒಕ್ಕೊರಲಿನಿಂದ, "ಆತನ ರಕ್ತದ ಹೊಣೆಯು ನಮ್ಮ ಮೇಲೆಯೂ, ನಮ್ಮ ಮಕ್ಕಳ ಮೇಲೆಯೂ ಇರಲಿ," ಎಂದರು. 26 ಆಗ ಅವನು ಬರಬ್ಬನನ್ನು ಜನಸಮೂಹಕ್ಕೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು. 

ಯೇಸುವನ್ನು ಅಪಹಾಸ್ಯ ಮಾಡಿ ಶಿಲುಬೆಗೆ ಹಾಕಿದ್ದು
(ಮಾರ್ಕ15:16-41; ಲೂಕ23:26, 33-49; ಯೊವಾನ್ನ19:2, 3, 16-30)

27 ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ಅರಮನೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ತಂಡವನ್ನು ಯೇಸುವಿನ ಸುತ್ತಲೂ ನಿಲ್ಲಿಸಿ 28 ಯೇಸುವಿನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ತೊಡಿಸಿದರು. 29 ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಅವರ ತಲೆಯ ಮೇಲಿಟ್ಟು, ಬಲಗೈಗೆ ಒಂದು ಬೆತ್ತವನ್ನೂ ಕೊಟ್ಟು ಅವರ ಮುಂದೆ ಮೊಣಕಾಲೂರಿ, "ಯೆಹೂದ್ಯರ ಅರಸನೇ, ವಂದನೆ," ಎಂದು ಹೇಳಿ ಅವರನ್ನು ಅಪಹಾಸ್ಯ ಮಾಡಿದರು. 30 ಅವರ ಮುಖದ ಮೇಲೆ ಉಗುಳಿ ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಹೊಡೆದರು. 31 ಆ ನಂತರ ಕೆಂಪು ನಿಲುವಂಗಿಯನ್ನು ಯೇಸುವಿನಿಂದ ತೆಗೆದು ಅವರ ಸ್ವಂತ ವಸ್ತ್ರವನ್ನು ಹೊದಿಸಿ ಶಿಲುಬೆಗೆ ಹಾಕುವುದಕ್ಕಾಗಿ ಅವರನ್ನು ತೆಗೆದುಕೊಂಡು ಹೋದರು. 32 ಅವರು ಹೊರಗೆ ಬರುತ್ತಿರಲು ಸಿರೇನ್ಯದ ಸಿಮೋನನೆಂಬ ಮನುಷ್ಯನನ್ನು ಕಂಡು ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನಿಗೆ ಬಲವಂತ ಮಾಡಿದರು. 33 ಆಮೇಲೆ ಅವರು ಗೊಲ್ಗೊಥಾ ಎಂದು ಕರೆಯಲ್ಪಡುವ ಕಪಾಲಬೆಟ್ಟಕ್ಕೆ ಬಂದರು. 34 ಅಲ್ಲಿ ಅವರು ಯೇಸುವಿಗೆ ಕಹಿಬೆರಸಿದ ಹುಳಿರಸವನ್ನು ಕುಡಿಯಲು ಕೊಟ್ಟರು; ಅದರ ರುಚಿಯನ್ನು ನೋಡಿ ಯೇಸುವು ಅದನ್ನು ಕುಡಿಯಲು ನಿರಾಕರಿಸಿದರು. 35 ತರುವಾಯ ಅವರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ಬಟ್ಟೆಗಳಿಗಾಗಿ ಚೀಟು ಹಾಕಿ ಹಂಚಿಕೊಂಡರು; 36 ಅನಂತರ ಅವರು ಕೆಳಗೆ ಕುಳಿತು ಕಾವಲು ಕಾಯತೊಡಗಿದರು. 37 ಅಲ್ಲದೆ ಯೇಸುವಿನ ತಲೆಯ ಮೇಲ್ಭಾಗದಲ್ಲಿ, 'ಈತನು ಯೆಹೂದ್ಯರ ಅರಸನಾದ ನಜರೇತಿನ ಯೇಸು,' ಎಂದು ಬರೆಯಿಸಿದರು. 38 ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯೂ ಶಿಲುಬೆಗೆ ಹಾಕಿದರು. 39 ಹಾದಿಯಲ್ಲಿ ಹೋಗುತ್ತಿದ್ದವರು ಯೇಸುವನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ, 40 "ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವೆನೆಂದು ಹೇಳಿದೆಯಲ್ಲವೇ; ಈಗ ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗಿಳಿದು ಬಾ," ಎಂದರು. 41 ಅದೇ ಮೇರೆಗೆ ಪ್ರಧಾನ ಯಾಜಕರೂ, ಧರ್ಮಶಾಸ್ತ್ರಿಗಳೂ, ಪುರಪ್ರಮುಖರೂ ಅವರಿಗೆ ಹಾಸ್ಯ ಮಾಡಿ, 42 "ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಇವನು ಇಸ್ರೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವೂ ಅವನನ್ನು ನಂಬುವೆವು; 43 ಇವನು ದೇವರಲ್ಲಿ ವಿಶ್ವಾಸವಿಟ್ಟವನು; ದೇವರಿಗೆ ಇಷ್ಟವಿದ್ದರೆ ಅವರು ಇವನನ್ನು ಈಗಲೇ ಬಿಡಿಸಲಿ; ಏಕೆಂದರೆ ಆತನು, ತಾನು ದೇವಕುಮಾರನು ಎಂದು ಹೇಳಿದ್ದಾನೆ," ಎಂದರು. 44 ಯೇಸುವಿನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು. 45 ಆಗ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಗೆ ಯೇಸುವು, "ಏಲೀ, ಏಲೀ, ಲಮಾ ಸಬಕ್ತಾನೀ?" ಅಂದರೆ, "ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿರುವೆ?" ಎಂದು ಮಹಾಶಬ್ದದಿಂದ ಕೂಗಿ ಹೇಳಿದರು. 47 ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, "ಇವನು ಎಲೀಯನನ್ನು ಕರೆಯುತ್ತಿದ್ದಾನೆ," ಎಂದರು. 48 ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡು ಬಂದು ಅದನ್ನು ಹುಳಿರಸದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯಲು ಕೊಟ್ಟನು. 49 ಉಳಿದವರು, "ಇರಲಿ ಬಿಡು, ಎಲೀಯನು ಬಂದು ಇವನನ್ನು ರಕ್ಷಿಸುವನೇನೋ ನೋಡೋಣ," ಎಂದರು. 50 ಯೇಸು ಪುನಃ ಮಹಾಧ್ವನಿಯಿಂದ ಕೂಗಿ ಪ್ರಾಣವನ್ನು ಬಿಟ್ಟರು. 51 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಇಭ್ಭಾಗವಾಯಿತು; ಭೂಮಿಯು ಕಂಪಿಸಿತು; ಬಂಡೆಗಳು ಸೀಳಿದವು; 52 ಅಲ್ಲದೆ ಸಮಾಧಿಗಳು ತೆರೆಯಲ್ಪಟ್ಟು ಚಿರನಿದ್ರೆಯಲ್ಲಿದ್ದ ಅನೇಕ ಭಕ್ತರ ದೇಹಗಳು ಎದ್ದವು. 53 ಅವರು ಸಮಾಧಿಗಳಿಂದ ಎದ್ದು ಹೊರಬಂದು ಪವಿತ್ರನಗರದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು. 54 ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪನ, ಇನ್ನಿತರ ಅನಿಷ್ಟ ಸಂಭವಗಳು ನಡೆದುದನ್ನೂ ಕಂಡು ಬಹಳವಾಗಿ ಭಯಪಟ್ಟು, "ನಿಜವಾಗಿಯೂ ಈತನು ದೇವಕುಮಾರನೇ," ಎಂದರು. 55 ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದ ಅನೇಕ ಸ್ತ್ರೀಯರು ದೂರದಲ್ಲಿ ನಿಂತು ನೋಡುತ್ತಿದ್ದರು. ಇವರು ಯೇಸುವಿಗೆ ಸಹಾಯವನ್ನು ಮಾಡುತ್ತಾ ಬಹುದೂರದಿಂದ ಬಂದಿದ್ದರು. 56 ಅವರಲ್ಲಿ ಮಗ್ದಲದ ಮರಿಯಳು, ಯಾಕೋಬ ಯೋಸೆಯರ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿಯೂ ಇದ್ದರು. 

ಯೇಸುವಿನ ಸಮಾಧಿ
(ಮಾರ್ಕ15:42-47; ಲೂಕ23:50-56; ಯೊವಾನ್ನ19:38-42)

57 ಸಂಜೆಯಾದಾಗ ಅರಿಮಥಾಯದವನಾದ ಜೋಸೆಫನೆಂಬ ಹೆಸರಿನ ಸಿರಿವಂತನೊಬ್ಬನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು. 58 ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು. ಆಗ ಪಿಲಾತನು ಆ ದೇಹವನ್ನು ಅವನಿಗೆ ಒಪ್ಪಿಸಲು ಅಪ್ಪಣೆ ಕೊಟ್ಟನು. 59 ಜೋಸೆಫನು ಆ ದೇಹವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿ, 60 ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಯೇಸುವಿನ ಶರೀರವನ್ನಿಟ್ಟು ಆ ಸಮಾಧಿಯ ಬಾಗಿಲಿಗೆ ದೊಡ್ಡ ಒಂದು ಕಲ್ಲನ್ನು ಉರುಳಿಸಿ ಹೊರಟು ಹೋದನು. 61 ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು. 

62 ಮರುದಿನ ಅಂದರೆ 'ಸಿದ್ಧತೆಯ ದಿನ' ಕಳೆದ ಮೇಲೆ ಪ್ರಧಾನ ಯಾಜಕರು ಮತ್ತು ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು, 63 "ದೊರೆಯೇ, ಆ ಮೋಸಗಾರನು ಬದುಕಿದ್ದಾಗ, 'ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ', ಎಂದು ಹೇಳಿದ್ದು ನಮ್ಮ ನೆನಪಿನಲ್ಲಿದೆ. 64 ಅವನ ಶಿಷ್ಯರು ರಾತ್ರಿಯಲ್ಲಿ ಬಂದು ದೇಹವನ್ನು ಕದ್ದುಕೊಂಡು ಹೋಗಿ, ಅವನು ಸತ್ತವರೊಳಗಿನಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತಲೂ ಕೊನೆಯ ಮೋಸವೇ ಕೆಟ್ಟಮೋಸವಾದಿತು. ಆದಕಾರಣ ಮೂರನೆಯ ದಿನದವರೆಗೆ ಸಮಾಧಿಯನ್ನು ಭದ್ರಪಡಿಸಿ ಕಾವಲು ಕಾಯುವಂತೆ ಅಪ್ಪಣೆ ಕೊಡಬೇಕು," ಎಂದನು. 65 ಪಿಲಾತನು ಅವರಿಗೆ, "ಕಾವಲುಗಾರರು ನಿಮ್ಮಲ್ಲೇ ಇದ್ದಾರಲ್ಲಾ, ನೀವೇ ಹೋಗಿ ನಿಮಗೆ ಸಾಧ್ಯವಾದ ಮಟ್ಟಿಗೆ ಅದನ್ನು ಭದ್ರಪಡಿಸಿರಿ," ಎಂದನು. 66 ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ, ಕಲ್ಲಿಗೆ ಮುದ್ರೆಯನ್ನು ಹಾಕಿ ಕಾವಲನ್ನು ಇಟ್ಟರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ