ಅಧ್ಯಾಯ 21

ಮತ್ತಾಯನು ಬರೆದ ಸುಸಂದೇಶಗಳು


ಅರಸನಂತೆ ಜೆರುಸಲೇಮಿಗೆ ಪ್ರವೇಶ
(ಮಾರ್ಕ11:1-1; ಲೂಕ19:29-40; ಯೊವಾನ್ನ12:12-19)

1 ಯೇಸು ಮತ್ತು ಅವರ ಶಿಷ್ಯರು ಹಿಂಬಾಲಕರೊಂದಿಗೆ ಜೆರುಸಲೇಮಿನ ಬಳಿಯ ಎಣ್ಣೆ ಮರಗಳ ಗುಡ್ಡವಾದ ಬೆತ್ಫಗೆಗೆ ಬಂದರು. ಯೇಸುವು ಶಿಷ್ಯರಿಗೆ, 2 "ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ಅಲ್ಲಿ ಒಂದು ಕತ್ತೆಯನ್ನು ತನ್ನ ಮರಿಯೊಂದಿಗೆ ಕಟ್ಟಿ ಹಾಕಿರುವುದನ್ನು ನೀವು ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. 3 ಯಾರಾದರೂ ನಿಮಗೆ ಏನನ್ನಾದರೂ ಕೇಳಿದರೆ ನೀವು ಅವರಿಗೆ, 'ಅವು ಪ್ರಭುವಿಗೆ ಬೇಕಾಗಿವೆ' ಎಂದು ಹೇಳಿರಿ; ಆಗ ಅವರು ಅವುಗಳನ್ನು ತೆಗದುಕೊಂಡುಹೋಗಲು ಅನುಮತಿಸುವರು" ಎಂದು ಹೇಳಿದರು. 4 ಇದೆಲ್ಲವೂ ಪ್ರವಾದಿಯು ನುಡಿದ ಪ್ರವಾದನೆಯಂತೆ ನೆರವೇರಿತು. ಅದೆಂದರೆ; 

5 'ಸಿಯೋನ್‌ ನಗರಿಯೆ,
ನೋಡು ಶಾಂತಸ್ವಭಾವದವನಾಗಿಹ ನಿನ್ನರಸನನು 
ಕತ್ತೆಯನ್ನೂ, ಪ್ರಾಯದ ಕತ್ತೆ ಮರಿಯನ್ನೂ ಹತ್ತಿ 
ಬರುವನವನು ನಿನ್ನ ಬಳಿಗೆ' 
ಎಂಬುದು.

6 ಶಿಷ್ಯರು ಹೊರಟುಹೋಗಿ ಯೇಸುವು ಹೇಳಿದಂತೆಯೇ ಮಾಡಿದರು. 7 ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿ ಯೇಸುವನ್ನು ಆದರ ಮೇಲೆ ಹತ್ತಿಸಿದರು. 8 ಆಗ ಜನರ ಸಮೂಹವು ತಮ್ಮ ವಸ್ತ್ರಗಳನ್ನು ದಾರಿಯಲ್ಲಿ ಹಾಸಿದರು; ಉಳಿದವರು ಮರಗಳಿಂದ ಕೊಂಬೆಗಳನ್ನು ಕತ್ತರಿಸಿ ದಾರಿಯಲ್ಲಿ ಹರಡಿದರು. 9 ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಗುಂಪು, 'ದಾವೀದನ ಕುಲಪುತ್ರರಿಗೆ ಹೊಸಾನ್ನ; ಪ್ರಭುವಿನ ನಾಮದಿ ಬರುವವರು ಧನ್ಯರು; ಮಹೋನ್ನತದಲ್ಲಿ ಹೊಸಾನ್ನ' ಎಂದು ಕೂಗುತ್ತಾ ಹೇಳಿದರು. 10 ಯೇಸುವು ಜೆರುಸಲೇಮಿನೊಳಕ್ಕೆ ಪ್ರವೇಶಿಸಿದಾಗ ಪಟ್ಟಣದಲ್ಲಿ ಗದ್ದಲಾಶ್ಚರ್ಯಗಳು ಮೂಡಿದವು; "ಇವರು ಯಾರು?" ಎಂಬುದಾಗಿ ಜನರು ಮಾತನಾಡಿಕೊಂಡರು. 11 ಅದಕ್ಕೆ ಜನರ ಗುಂಪು, "ಇವರು  ಗಲಿಲೇಯ ಸೀಮೆಯ ನಜರೇತಿನ ಪ್ರವಾದಿ ಯೇಸು" ಎಂದು ಹೇಳಿದರು. 

ದೇವಾಲಯದಿಂದ ವ್ಯಪಾರಿಗಳನ್ನು ಓಡಿಸಿದ್ದು
(ಮಾರ್ಕ11:11-24; ಲೂಕ19:45-48)

12 ಬಳಿಕ ಯೇಸುವು ದೇವಾಲಯದೊಳಕ್ಕೆ ಹೋದಾಗ ಅಲ್ಲಿ ವ್ಯಾಪಾರಿಗಳು ವ್ಯಾಪಾರದಲ್ಲಿ ನಿರತರಾಗಿರುವುದನ್ನು ಕಂಡು ಅವರನ್ನೆಲ್ಲಾ ಹೊರಕ್ಕೆ ಹಾಕಿ, ಹಣ ವಿನಿಮಯ ಮಾಡುವವರ ಮೇಜುಗಳನ್ನೂ, ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು. 13 "ನನ್ನ ಆಲಯವು ಪ್ರಾರ್ಥನೆಯಾಲಯವೆನಿಸಿಕೊಳ್ಳುವುದು" ಎಂದು ಕರೆಯಲ್ಪಡುವುದಾಗಿ ಧರ್ಮಗ್ರಂಥದಲ್ಲಿ ಬರೆದಿದೆ; ಆದರೆ ನೀವದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ" ಎಂದು ಯೇಸು ಅಲ್ಲಿರುವವರನ್ನು ಕುರಿತು ಹೇಳಿದರು. 

14 ಆಗ ಕುರುಡರು ಮತ್ತು ಕುಂಟರು ದೇವಾಲಯದೊಳಕ್ಕೆ ಪ್ರವೇಶಿಸಿ ಯೇಸುವಿನ ಬಳಿಗೆ ಬಂದರು; ಯೇಸುವು ಅವರನ್ನೆಲ್ಲಾ ಗುಣಪಡಿಸಿದರು. 15 ಅವರು ಮಾಡಿದ ಅದ್ಭುತ ಕಾರ್ಯಗಳನ್ನು ಮತ್ತು ದೇವಾಲಯದಲ್ಲಿ ಮಕ್ಕಳು, 'ದಾವೀದನ ಕುಲಪುತ್ರರಿಗೆ ಹೊಸಾನ್ನ' ಎಂದು ಕೂಗುತ್ತಿರುವುದನ್ನು ಕಂಡ ಪ್ರಧಾನ ಯಾಜಕರೂ, ಧರ್ಮಶಾಸ್ತ್ರಿಗಳೂ ಕೋಪಗೊಂಡು ಯೇಸುವಿಗೆ, 16 "ಮಕ್ಕಳು ಕೂಗುತ್ತಿರುವುದನ್ನು ನಿನಗೆ ಕೇಳಿಸುತ್ತಿದೆಯಾ?" ಎಂದು ಕೇಳಿದರು. ಅದಕ್ಕೆ ಯೇಸುವು ಅವರಿಗೆ, "ಸಣ್ಣ ಬಾಲಕರ ಮತ್ತು ಮೊಲೆಗೂಸುಗಳ ಬಾಯಿಂದ ನಿಮಗೆ ಸ್ತೋತ್ರವು ಸಲ್ಲಲಿದೆ," ಎಂಬುದನ್ನು ಪವಿತ್ರಗ್ರಂಥದಲ್ಲಿ ನೀವೆಂದೂ ಓದಲಿಲ್ಲವೇ?" ಎಂದರು. ತದನಂತರ 17 ಅವರು ದೇವಾಲಯವನ್ನು ಬಿಟ್ಟು ಪಟ್ಟಣದಿಂದ ಹೊರಟು ಬೆಥನಿಗೆ ಹೋಗಿ ಅಲ್ಲಿ ಉಳಿದುಕೊಂಡರು. 

18 ಬೆಳಿಗ್ಗೆ ಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದಾಗ ಯೇಸುವಿಗೆ ಹಸಿವಾಗಿತ್ತು. 19 ಆಗ ಅವರು ದಾರಿಯಲ್ಲಿದ್ದ ಒಂದು ಅಂಜೂರದ ಮರವನ್ನು ಕಂಡು ಅದರ ಬಳಿ ಬಂದಾಗ ಅದರಲ್ಲಿ ಎಲೆಗಳನ್ನು ಹೊರತು ಪಡಿಸಿ ಮತ್ತೇನೂ ಕಾಣಲಿಲ್ಲ. ಆಗ ಯೇಸುವು ಆ ಮರಕ್ಕೆ, "ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ" ಎಂದರು. ತಕ್ಷಣವೇ ಆ ಅಂಜೂರದ ಮರವು ಒಣಗಿ ಹೋಯಿತು. 20 ಶಿಷ್ಯರು ಅದನ್ನು ನೋಡಿ ಅತ್ಯಾಶ್ಚರ್ಯದಿಂದ, "ಎಷ್ಟು ಬೇಗ ಈ ಅಂಜೂರದ ಮರವು ಒಣಗಿಹೋಯಿತು?" ಎಂದು ಹೇಳಿದರು. 21 ಪ್ರತ್ಯುತ್ತರವಾಗಿ ಯೇಸುವು ಅವರಿಗೆ, "ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಈ ಅಂಜೂರದ ಮರಕ್ಕೆ ಮಾಡಿದಂತೆ ನಿಮ್ಮಲ್ಲಿ ನಂಬಿಕೆಯಿದ್ದು ನೀವು ಈ ಗುಡ್ಡಕ್ಕೆ, 'ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು' ಎಂದು ಹೇಳಿದರೂ ಹಾಗೆಯೇ ಆಗುವುದು. 22 ನಿಮ್ಮಲ್ಲಿ ವಿಶ್ವಾಸವಿದ್ದು ಪ್ರಾರ್ಥನೆಯ ವೇಳೆಯಲ್ಲಿ ಏನನ್ನು ಬೇಡಿಕೊಳ್ಳುವಿರೋ ಅವುಗಳೆಲ್ಲವನ್ನೂ ನೀವು ಪಡೆಯುವಿರಿ," ಎಂದರು. 

ಮೂರು ಸಾಮತಿಗಳು
(ಮಾರ್ಕ11:27, 12:12; ಲೂಕ20:1-19; 14:16-24)

23 ತರುವಾಯ ಯೇಸುವು ದೇವಾಲಯಕ್ಕೆ ಬಂದು ಬೋಧಿಸುತ್ತಿದ್ದಾಗ ಪ್ರಧಾನಯಾಜಕರೂ, ಪ್ರಜಾಪ್ರತಿನಿಧಿಗಳೂ ಅವರ ಬಳಿಗೆ ಬಂದು, "ನೀನು ಇವುಗಳನ್ನು ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?" ಎಂದು ಕೇಳಿದರು. 24 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ, "ನಾನೂ ಸಹ ಒಂದು ವಿಷಯವನ್ನು ನಿಮ್ಮಲ್ಲಿ ಕೇಳುತ್ತೇನೆ; ನೀವು ನನಗೆ ಅದಕ್ಕೆ ಉತ್ತರವನ್ನು ಹೇಳಿದರೆ, ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂಬುದನ್ನು ನಾನು ನಿಮಗೆ ಹೇಳುವೆನು" ಎಂದು ಹೇಳಿ, "ಯೊವಾನ್ನನು ನೀಡಿದ ದೀಕ್ಷಾಸ್ನಾನಕ್ಕೆ ಎಲ್ಲಿಂದ ಅನುಮತಿ ದೊರಕಿತು? 25 ಪರಲೋಕದಿಂದಲೋ ಇಲ್ಲ ಮನುಷ್ಯರಿಂದಲೋ" ಎಂದು ಕೇಳಿದಾಗ, ಅವರು ತಮ್ಮತಮ್ಮೊಳಗೆ ತರ್ಕಿಸತೊಡಗಿದರು. 'ಪರಲೋಕದಿಂದ ಯೊವಾನ್ನನಿಗೆ ಅನುಮತಿ ದೊರೆಯಿತು' ಎಂದು ಹೇಳಿದರೆ,  ಯೇಸುವು ಅವರನ್ನು, 'ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?' ಎಂದು ಕೇಳಬಹುದು, 26 ಇನ್ನು 'ಮನುಷ್ಯರಿಂದ...' ಎಂದು ಹೇಳಿದರೆ ತಾವು ಜನರಿಗೆ ಹೆದರ ಬೇಕಾಗುತ್ತದೆ ಎಂದವರು ಭೀತರಾದರು; ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ವಿಶ್ವಾಸಿಸಿ ಗೌರವಿಸುತ್ತಿದ್ದರು. 27 ಹಾಗಾಗಿ ಅವರು ಯೇಸುವಿಗೆ, "ನಮ್ಮಿಂದ ಹೇಳಲಾಗದು," ಎಂದು ನುಡಿದರು. ಅದಕ್ಕೆ ಯೇಸುವು, "ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವದಿಲ್ಲ" ಎಂದರು. 28 ಬಳಿಕ, "ಈ ಬಗ್ಗೆ ನೀವೇನನ್ನುತೀರಿ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು; ಅವನು ಮೊದಲನೆಯವನ ಬಳಿಗೆ ಬಂದು, 'ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷಿಯ ತೋಟದಲ್ಲಿ ಕೆಲಸಮಾಡು' ಎಂದು ಹೇಳಿದನು. 29 ಅವನು ಪ್ರತ್ಯುತ್ತರವಾಗಿ, 'ನಾನು ಹೋಗುವುದಿಲ್ಲ' ಎಂದು ಹೇಳಿದನಾದರೂ ತರುವಾಯ ಪಶ್ಚಾತ್ತಾಪ ಪಟ್ಟು ದ್ರಾಕ್ಷಾತೋಟಕ್ಕೆ ಹೋದನು. 30 ಆಮೇಲೆ ಅವನು ಎರಡನೆ ಮಗನ ಬಳಿ ಬಂದು ಅದೇ ಪ್ರಕಾರವಾಗಿ ಅವನಿಗೂ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ, 'ಅಪ್ಪಾ, ನಾನು ಹೋಗುತ್ತೇನೆ' ಎಂದು ಹೇಳಿದನಾದರೂ ಅವನು ಹೋಗಲೇ ಇಲ್ಲ. 31 ಈ ಇಬ್ಬರಲ್ಲಿ ಯಾರು ತನ್ನ ತಂದೆಯ ಇಷ್ಟದಂತೆ ನಡೆದುಕೊಂಡರು?" ಎಂದು ಕೇಳಲು ಅವರು ಯೇಸುವಿಗೆ, "ಮೊದಲನೆಯವನು" ಎಂದರು. ಅದಕ್ಕೆ ಯೇಸುವು ಅವರಿಗೆ, "ಸುಂಕದವರೂ, ವೇಶ್ಯೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಕ್ಕೆ ಪ್ರವೇಶಿಸುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ, 32 ಏಕೆಂದರೆ ಯೊವಾನ್ನನು ನೀತಿಯ ಮಾರ್ಗದಲ್ಲಿ ನಿಮ್ಮ ಬಳಿಗೆ ಬಂದನು. ಮತ್ತು ನೀವು ಅವನನ್ನು ನಂಬಲಿಲ್ಲ; ಆದರೆ ಸುಂಕದವರೂ, ವೇಶ್ಯೆಯರೂ ಅವನನ್ನು ನಂಬಿದರು; ನೀವು ಅದನ್ನು ನೋಡಿದ ಮೇಲೆಯೂ ಅವನನ್ನು ನಂಬದೇ ಇದ್ದುದಕ್ಕೆ ಪಶ್ಚಾತ್ತಾಪ ಪಡಲಿಲ್ಲ" ಎಂದು ಹೇಳಿದರು. 33 ಬಳಿಕ, "ಮತ್ತೊಂದು ಸಾಮತಿಯನ್ನು ಕೇಳಿರಿ: ಒಬ್ಬ ಯಜಮಾನನು ದ್ರಾಕ್ಷಾತೋಟವನ್ನು ಮಾಡಿ ಅದರ ಸುತ್ತಲೂ ಬೇಲಿಹಾಕಿ, ಅದರೊಳಗೆ ತೊಟ್ಟಿಯೊಂದನ್ನು ಕಟ್ಟಿಸಿ, ಮೇಲೊಂದು ಚಪ್ಪರವನ್ನು ಹಾಕಿಸಿದನು. ಅನಂತರ ಅದನ್ನು ಗೇಣಿದಾರರಿಗೆ ವಹಿಸಿಕೊಟ್ಟು ಹೊರದೇಶಕ್ಕೆ ಹೊರಟುಹೋದನು. 34 ಫಸಲಿನ ಕಾಲವು ಸಮಾಪಿಸಿದಂತೆ ತನ್ನ ಫಲಗಳನ್ನು ಪಡೆದುಕೊಳ್ಳಲೆಂದು ತನ್ನ ಸೇವಕರನ್ನು ಗೇಣಿದಾರರ ಬಳಿಗೆ ಕಳುಹಿಸಿದನು. 35 ಅವರು ಸೇವಕರನ್ನು ಹಿಡಿದು ಹೊಡೆದು ಒಬ್ಬನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದು ಓಡಿಸಿದರು. 36 ಯಜಮಾನನು ಪುನಃ ಇನ್ನೂ ಹೆಚ್ಚಿನ ಸೇವಕರನ್ನು ಕಳುಹಿಸಿಕೊಟ್ಟನು; ಗೇಣಿದಾರರು ಅವರಿಗೂ ಅದೇ ಗತಿಯನ್ನು ಮಾಡಿದರು. 37 ಆದರೆ ಯಜಮಾನನು, "ನನ್ನ ಮಗನಿಗಾದರೂ ಅವರು ಮರ್ಯಾದೆ ನೀಡಿಯಾರು" ಎಂದು ತಿಳಿದು ಕೊನೆಯದಾಗಿ ಅವನನ್ನು ಅವರ ಬಳಿಗೆ ಕಳುಹಿಸಿದನು. 38 ಆದರೆ ಆ ಗೇಣಿದಾರರು ಯಜಮಾನನ ಮಗನನ್ನು ನೋಡಿ ತಮ್ಮತಮ್ಮೊಳಗೆ, ಇವನು ತೋಟದ ವಾರಸುದಾರ, ಬನ್ನಿರಿ; ನಾವು ಇವನನ್ನು ಮುಗಿಸಿ, ತೋಟವನ್ನು ಸ್ವಾಧೀನಮಾಡಿಕೊಳ್ಳೋಣ" ಎನ್ನುತ್ತಾ, 39 ಯಜಮಾನನ ಮಗನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ತಳ್ಳಿ, ಕೊಂದು ಹಾಕಿದರು. 40 ಹೀಗಿರಲಾಗಿ, ದ್ರಾಕ್ಷಾತೋಟದ ಯಜಮಾನನು ಬಂದು ಆ ಗೇಣಿದಾರರನ್ನು ಏನು ಮಾಡಬಹುದು?" ಎಂದರು. 
41 ಫರಿಸಾಯರು ಯೇಸುವಿಗೆ, "ಅವನು ಆ ದುಷ್ಟ ಮನುಷ್ಯರನ್ನು ಕ್ರೂರವಾಗಿ ಸಂಹರಿಸಿ, ಕಾಲಕಾಲಕ್ಕೆ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಗೇಣಿದಾರರಿಗೆ ತನ್ನ ದ್ರಾಕ್ಷಾತೋಟದ ಉಸ್ತುವಾರಿಯನ್ನು ವಹಿಸಿಕೊಡುವನು" ಎಂದು ಹೇಳಿದರು. 

42 ಯೇಸುವು ಅವರಿಗೆ, "ಮನೆಯನ್ನು ಕಟ್ಟುವವನು ಬೇಡವೆಂದು ತಿರಸ್ಕರಿಸಿದ ಕಲ್ಲೇ ಮನೆಯ ಮುಖ್ಯ ಮೂಲೆಗಲ್ಲಾಯಿತು; ಸರ್ವೇಶ್ವರನಿಂದ ಆದ ಈ ಕಾರ್ಯ ನಮ್ಮ ದೃಷ್ಟಿಯಲ್ಲಿ ಆಶ್ಚರ್ಯಕರವಾದದ್ದು,  ಎಂಬ ವಾಕ್ಯಗಳನ್ನು ಪವಿತ್ರ ಧರ್ಮಗ್ರಂಥದಲ್ಲಿ ನೀವೆಂದಾದರೂ ಓದಿರುವಿರಾ? 43 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತು ತೆಗೆದು, ಅದರ ಫಲಗಳನ್ನು ಸರಿಯಾಗಿ ಒಪ್ಪಿಸಬಲ್ಲ ಜನರ ಕೈಗೆ ನೀಡಲಾಗುವುದು. 44 ಕಲ್ಲಿನ ಮೇಲೆ ಬೀಳುವವನು ಛಿದ್ರಛಿದ್ರನಾಗುವನು; ಅದು ಯಾರ ಮೇಲೆ ಬೀಳುವುದೋ ಅವನು ಜಜ್ಜಿಹೋಗುವನು" ಎಂದರು. 

45 ಪ್ರಧಾನ ಯಾಜಕರೂ, ಫರಿಸಾಯರೂ ಯೇಸುವಿನ ಸಾಮತಿಗಳನ್ನು ಕೇಳಿ ತಮ್ಮ ವಿಷಯವಾಗಿಯೇ ಅವರು ಅದನ್ನು ಹೇಳಿದರಂದು ಅರ್ಥಮಾಡಿಕೊಂಡರು. 46 ಅವರು ಯೇಸುವನ್ನು ಹಿಡಿಯಲು ಪ್ರಯತ್ನಿಸಿ ಜನಸಮೂಹಕ್ಕೆ ಅಂಜಿ ಸುಮ್ಮನಾದರು; ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ತಿಳಿದುಕೊಂಡಿದ್ದರು. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ