ಅಧ್ಯಾಯ 20

ಮತ್ತಾಯನು ಬರೆದ ಸುಸಂದೇಶಗಳು


 ದ್ರಾಕ್ಷಿತೋಟದ ಮಾಲೀಕ

1 ಅನಂತರ ಯೇಸುವು, "ಸ್ವರ್ಗಸಾಮ್ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯಲು ಹೊರಟ ಯಜಮಾನನಿಗೆ ಹೋಲಿಸಬಹುದಾಗಿದೆ. 2 ಅವನು ಕೂಲಿಯಾಳುಗಳಿಗೆ ದಿನಕ್ಕೆ ಒಂದು ಪಾವಲಿಯಂತೆ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ಬೆಳಿಗಿನ ಜಾವದಲ್ಲಿ ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು. 3 ಅನಂತರ ಅವನು ಸುಮಾರು ಎಂಟು ಗಂಟೆಗೆ ಹೊರಗೆ ಹೋಗಿ ಇನ್ನಷ್ಟು ಜನರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು 4 ಅವರಿಗೆ, "ನೀವು ದ್ರಾಕ್ಷಿಯ ತೋಟಕ್ಕೆ ಕೆಲಸಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ನಾನು ಕೊಡುವೆನು" ಎಂದು ಹೇಳಿದನು. 5 ಬಳಿಕ ಅವನು ಸುಮಾರು ಹತ್ತು ಗಂಟೆಗೂ ಮತ್ತು ಹನ್ನೆರಡು ಗಂಟೆಗೂ ಪುನಃ ಹೋಗಿ ಹಿಂದಿನಂತೆಯೇ ಮಾಡಿದನು. 6 ಸುಮಾರು ಎರಡು ಗಂಟೆಗೆ ಹೊರಕ್ಕೆ ಹೋಗಿದ್ದ ಅವನು ಕೆಲಸವಿಲ್ಲದೆ ನಿಂತಿದ್ದ ಇನ್ನೂ ಕೆಲವರನ್ನು ಕಂಡು ಅವರಿಗೆ, "ನೀವು ಕೆಲಸವಿಲ್ಲದೆ ದಿನವೆಲ್ಲಾ ಇಲ್ಲೇಕೆ ನಿಂತಿರುವಿರಿ?" ಎಂದು ಕೇಳಿದನು. 7 ಅವರು ಅವನಿಗೆ, "ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ" ಎಂದರು. ಆಗ ಅವನು, "ನೀವೂ ಸಹ ಕೆಲಸಕ್ಕೆ ನನ್ನ ದ್ರಾಕ್ಷಿಯ ತೋಟಕ್ಕೆ ಹೋಗಿರಿ. ನಿಮಗೆ ತಕ್ಕುದಾದ ಕೂಲಿಯು ಸಿಗುತ್ತದೆ" ಎಂದು ಹೇಳಿದನು. 8 ಹೀಗೆ ಸಂಜೆಯಾದಾಗ ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ,  "ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು" ಎಂದು ಹೇಳಿದನು. 9 ಸುಮಾರು ಎರಡು ಗಂಟೆಗೆ ಕರೆಯಲ್ಪಟ್ಟವರಲ್ಲಿ ಪ್ರತಿಯೊಬ್ಬನೂ ಒಂದೊಂದು ಪಾವಲಿ ಕೂಲಿಯನ್ನು ಪಡೆದನು. 10 ಆದರೆ ಮೊದಲು ಬಂದವರು ತಮಗೆ ಹೆಚ್ಚು ದೊರೆಯುವುದೆಂದು ತಿಳಿದರು. ಆದರೆ ಅವರೂ ಸಹ ಅದೇ ರೀತಿಯಲ್ಲಿ ಒಂದೊಂದು ಪಾವಲಿಯನ್ನು ಪಡೆದರು. 11 ಹಾಗೆ ಅವರು ಕೂಲಿಯನ್ನು ಪಡೆದಾಗ ತೋಟದ ಯಜಮಾನನಿಗೆ ವಿರುದ್ಧವಾಗಿ ಗೊಣಗುಟ್ಟುತ್ತಾ, 12 'ಕಡೆಯವರಾದ ಇವರು ಕೆಲವೇ ಗಂಟೆ ಕೆಲಸ ಮಾಡಿದ್ದಾರೆ; ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸ ಮಾಡಿದ ನಮಗೆ ಹೆಚ್ಚು ನೀಡದೇ ಅವರಿಗೆ ಸಮನಾಗಿ ನೀಡಿರುವಿರಲ್ಲಾ' ಎಂದರು. 13 ಯಜಮಾನನು ಅವರಿಗೆ ಪ್ರತ್ಯುತ್ತರವಾಗಿ, 'ಸ್ನೇಹಿತರೇ, ನಾನು ನಿಮ್ಮಲ್ಲಿ ಯಾರಿಗೂ ಅನ್ಯಾಯವನ್ನು ಮಾಡಲಿಲ್ಲ; ನನ್ನ ನಿಮ್ಮ ನಡುವೆ ಒಂದು ಪಾವಲಿಗೆ ಒಪ್ಪಂದವಾಗಲಿಲ್ಲವೇ? ಅದರಂತೆ ನಿಮಗೆ ನೀಡಿದ್ದೇನೆ. 14 ನಿಮ್ಮದನ್ನು ತೆಗೆದುಕೊಂಡು ನೀವು ಹೋಗಿ; ನಿಮಗೆ ನಾನು ಕೊಟ್ಟಂತೆಯೇ ಕೊನೆಯವನಿಗೂ ಕೊಡುವೆನು. 15 ನನ್ನ ಸ್ವಂತದ್ದನ್ನು ನನಗಿಷ್ಟ ಬಂದಂತೆ ನೀಡುವುದು ನನಗೆ ಸರಿಯೆನಿಸಿತು. ನನ್ನ ಒಳ್ಳೆಯತನ ಕಂಡು ನಿಮಗೇಕೆ ಹೊಟ್ಟೆಯುರಿ' ಎಂದನು. 16 ಹೀಗೆ ಕಡೆಯವರು ಮೊದಲನೆಯವರೂ; ಮೊದಲನೆಯವರು ಕಡೆಯವರೂ ಆಗುವರು. ಏಕೆಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಕೆಲವೇ ಮಂದಿ" ಎಂದು ಹೇಳಿದರು.

ಮರಣ ಪುನರುತ್ಥಾನವನ್ನು ಮೂರನೆಯ ಸಲ ಮುಂತಿಳಿಸಿದ್ದು
(ಮಾರ್ಕ10:32-34; ಲೂಕ18:31-33)

17 ತರುವಾಯ ಯೇಸುವು ಜೆರುಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, 18 "ನಾವು ಜೆರುಸಲೇಮಿಗೆ ಹೋಗುತ್ತೇವೆ. ಅಲ್ಲಿ ನರಪುತ್ರನು ಪ್ರಧಾನ ಯಾಜಕರಿಗೂ, ಧರ್ಮಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು. 19 ಇದಲ್ಲದೆ ಆತನನ್ನು ಹಾಸ್ಯ ಮಾಡುವುದಕ್ಕೂ, ಕೊರಡೆಗಳಿಂದ ಹೊಡೆಯುವುದಕ್ಕೂ, ಶಿಲುಬೆಗೆ ಹಾಕುವುದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು" ಎಂದು ಹೇಳಿದರು.

ಜೆಬೆದಾಯನ ಮಕ್ಕಳಿಗೆ ಹೆಚ್ಚಿನ ಸ್ಥಾನಕ್ಕಾಗಿ ಬೇಡಿಕೆ
(ಮಾರ್ಕ10:35-40)

20 ಅದೇ ಸಮಯದಲ್ಲಿ ಅಲ್ಲಿಗಾಗಮಿಸಿದ ಜೆಬೆದಾಯನ ಮಕ್ಕಳ ತಾಯಿಯು ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು ಅವರನ್ನು ವಂದಿಸುತ್ತಾ ಅವರಲ್ಲಿ ಏನನ್ನೋ ಬೇಡಿಕೊಳ್ಳಬೇಕೆಂದು ಇಚ್ಚಿಸಿದಳು. 21 ಅದನ್ನು ಗಮನಿಸಿದ ಯೇಸುವು ಆಕೆಗೆ, "ನೀನು ಏನನ್ನು ಹೇಳಬೇಕೆಂದಿರುವೆ?" ಎಂದು ಕೇಳಲು, ಆಕೆಯು ಯೇಸುವಿಗೆ, "ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಮಕ್ಕಳಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು" ಎಂದು ಬೇಡಿಕೊಂಡಳು. 22 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ನೀವು ಬೇಡಿಕೊಳ್ಳುವುದೇನೆಂಬುದು ನಿಮಗೆ ತಿಳಿಯದು. ನಾನು ಕುಡಿಯುವುದಕ್ಕಿರುವ ಪಾತ್ರೆಯಲ್ಲೇ ಕುಡಿಯಲು ನಿಮ್ಮಿಂದಾದೀತೇ? ನಾನು ಹೊಂದುವ ದೀಕ್ಷಾಸ್ನಾನವನ್ನು ನೀವು ಹೊಂದಲು ಆದೀತೇ?" ಎಂದು ಕೇಳಿದಾಗ, ಅವರು, "ನಮ್ಮಿಂದ ಆಗುವುದು" ಎಂದು ಹೇಳಿದಳು. 23 ಯೇಸುವು ಅವರಿಗೆ, "ನನ್ನ ಪಾತ್ರೆಯಲ್ಲೇ ನೀವು ಕುಡಿಯುವುದು ಮತ್ತು ನಾನು ಹೊಂದುವ ದೀಕ್ಷಾಸ್ನಾನವನ್ನು ನೀವು ಹೊಂದುವುದೇನೋ ಸರಿ; ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕಾಗಿರುವುದು ನಾನಲ್ಲ; ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಪಡಿಸಲಾಗಿದೆಯೋ ಅವರಿಗೇ ಅದು ದೊರೆಯುವುದು," ಎಂದು ನುಡಿದರು. 24 ಉಳಿದ ಹತ್ತು ಮಂದಿ ಶಿಷ್ಯರು ಅದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಕೋಪಗೊಂಡರು. 25 ಆದರೆ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು, "ಅನ್ಯ ಜನಾಂಗಗಳ ಅಧಿಪತಿಗಳು ಅವರ ಜನಗಳ ಮೇಲೆ ದರ್ಪದಿಂದ ಅಧಿಪತ್ಯ ನಡೆಸುವರು. ಜನನಾಯಕರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುವರು ಎಂಬುದು ನಿಮಗೂ ತಿಳಿದಿದೆ. ಆದರೆ ನಿಮ್ಮಲ್ಲಿ ಹಾಗಾಗಬಾರದು. 26 ನಿಮ್ಮಲ್ಲಿ ನಾಯಕನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ 27 ನಿಮ್ಮಲ್ಲಿ ಯಾರಾದರೂ ಯಜಮಾನನಾಗಬಯಸುವವನು ಆಳಾಗಿರಲಿ. 28 ಅದೇ ರೀತಿಯಲ್ಲಿ ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆ ಮಾಡುವುದಕ್ಕಾಗಿಯೂ, ಅನೇಕರಿಗಾಗಿ ತನ್ನ ಪ್ರಾಣವನ್ನು ಒಪ್ಪಿಸುವುದಕ್ಕಾಗಿಯೂ ಬಂದನು" ಎಂದು ಹೇಳಿದರು. 

ಇಬ್ಬರು ಕುರುಡರಿಗೆ ದೃಷ್ಟಿದಾನ
(ಮಾರ್ಕ10:46-52; ಲೂಕ18:35-43)

29 ಅವರು ಜೆರಿಕೊ ಪಟ್ಟಣದಿಂದ ಹೊರಟು ಹೋಗುತ್ತಿದ್ದಾಗ ಜನರ ಒಂದು ದೊಡ್ಡ ಸಮೂಹ ಅವರನ್ನು ಹಿಂಬಾಲಿಸಿತು. 30 ಆಗ ದಾರಿಯ ಮಗ್ಗುಲಲ್ಲಿ ಕುಳಿತಿದ್ದ ಇಬ್ಬರು ಕುರುಡರು, ಯೇಸು ಅದೇ ಹಾದಿಯಲ್ಲಿ ಹೋಗುತ್ತಿದ್ದಾರೆಂಬುದನ್ನು ಕೇಳಿ ತಿಳಿದು, "ಸ್ವಾಮಿ ದಾವೀದನ ಕುಲಪುತ್ರರೇ, ನಮ್ಮ ಮೇಲೆಯೂ ಕರುಣೆಯಿರಲಿ" ಎಂದು ಕೂಗಿಕೊಂಡರು. 31 ಆದರೆ ಅವರನ್ನು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿದರು. ಆದರೂ ಅವರು, "ಸ್ವಾಮಿ ದಾವೀದನಕುಲಪುತ್ರರೇ, ನಮ್ಮ ಮೇಲೆಯೂ ಕರುಣೆಯಿಡಿ" ಎಂದು ಮತ್ತಷ್ಟು ಧ್ವನಿಯಿಂದ ಕೂಗಿಕೊಂಡರು. 32 ಆಗ ಯೇಸುವು ನಿಂತು ಅವರ ಬಳಿ ನಡೆದು, "ನಾನು ನಿಮಗೇನು ಮಾಡಬೇಕೆಂದು ನೀವು ಬಯಸುತ್ತೀರಿ?" ಎಂದು ಕೇಳಿದರು. 33 ಅದಕ್ಕೆ ಅವರು, "ಸ್ವಾಮಿ, ನಮ್ಮ ಕಣ್ಣುಗಳು ತೆರೆಯಲ್ಪಡಬೇಕು" ಎಂದರು. 34 ಅವರ ಮೇಲೆ ಕನಿಕರಪಟ್ಟು ಯೇಸುವು ಅವರ ಕಣ್ಣುಗಳನ್ನು ಮುಟ್ಟಿದರು; ಕೂಡಲೆ ಅವರ ಕಣ್ಣುಗಳಿಗೆ ದೃಷ್ಟಿ ಬಂದವು; ಅವರು ಯೇಸುವನ್ನು ಹಿಂಬಾಲಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ